ಎಮ್.ಎಸ್.ರಮೇಶ್ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಶಂಕರ್ ಐ.ಪಿ.ಎಸ್. ಚಿತ್ರದ ಧ್ವನಿ ಸುರುಳಿ ಬಿಡುಗಡೆ ಸಮಾರಂಭ, ಮೈಸೂರಿನ ಪೈ ವಿಸ್ತಾ ಹೊಟೆಲಿನಲ್ಲಿ ನೆರವೇರಿತು. ಪಾಂಡವಪುರ ಶಾಸಕರಾದ ಪುಟ್ಟರಾಜು ಚಿತ್ರದ ಸಿಡಿಗಳನ್ನು ರಿಲೀಜ್ ಮಾಡಿದರು. ನಟ ಪ್ರೇಮ್ ಮುಖ್ಯ ಅತಿಥಿಯಾಗಿ ಆಗಮಿಸಿ ಸ್ನೇಹಿತ ಹಾಗೂ ನಾಯಕ ವಿಜಯ್ ಗೆ ಶುಭ ಹಾರೈಸುತ್ತಾ ವಿಜಯ್ ಈಗಿನ ಕಾಲದ ಹುಡುಗಿಯರಿಗೆ ಇಷ್ಟವಾಗುತ್ತಾರೆ ಅಲ್ಲದೆ ನೈಜ ಅಭಿನಯಕ್ಕೆ ಹೆಸರಾದ ನಟ. ಎಮ್.ಎಸ್.ರಮೇಶ, ಗುರುಕಿರಣ್ ಹಾಗೂ ದಾಸರಿ ಸಿನು ಅವರ ಕಾಂಬಿನೇಷನ್ ಎಂದ ಮೇಲೆ ಉತ್ತಮ ಪ್ರಾಜೆಕ್ಟ್ ಆಗಿರಲೇ ಬೇಕು. ಬೇರೆ ಭಾಷೆಯ ಕಲಾವಿದರಿಗಿಂತ ಕನ್ನಡಿಗರೇನು ಕಮ್ಮಿಯಿಲ್ಲ ಎಂದು ವಿಜಯ್ ಈ ಚಿತ್ರದಲ್ಲಿ ತೋರಿಸಿಕೊಟ್ಟಿದ್ದಾರೆ ಎಂದು ಹೆಮ್ಮೆಯಿಂದ ಹೇಳಿದರು. ನಿರ್ದೇಶಕ ಎಮ್.ಎಸ್.ರಮೇಶ ಮಾತನಾಡಿ ನಾವು ಅಂದುಕೊಂಡ ರೀತಿಯಲ್ಲಿಯೇ ಚಿತ್ರ ಮೂಡಿ ಬಂದಿದೆ. ವಿಜಯ್ ಒಬ್ಬ ಪೋಲೀಸ್ ಅಧಿಕಾರಿಯ ಪಾತ್ರವನ್ನು ಬಹಳ ನೈಜವಾಗಿ ನಿರ್ವಹಿಸಿದ್ದಾರೆ. ನಿಜವಾದ ಪೋಲೀಸ್ ಅಧಿಕಾರಿಗಳಿಗೆ ಈ ಚಿತ್ರ ಖಂಡಿತ ಅವರ ಮನಸ್ಸನ್ನು ತಟ್ಟುತ್ತದೆ. ಈಗಿನ ಕಾನೂನು ಸುವ್ಯವಸ್ಥೆಯ ಬಗ್ಗೆ ನಾಗರೀಕರಿಗೆ ಮನವರಿಕೆ ಆಗುವಂತೆ ಹೇಳುವ ಪ್ರಯತ್ನ ಮಾಡಿದ್ದೇನೆ. ಒಂದು ಸಂಸಾರ ಒಟ್ಟಿಗೆ ಕುಳಿತು ಈ ಚಿತ್ರ ನೊಡಿದರೆ ಎಲ್ಲರೂ ಅದರಲ್ಲಿನ ಒಂದು ಪಾತ್ರಕ್ಕೆ ತಮ್ಮನ್ನು ಹೋಲಿಸಿಕೊಳ್ಳುತ್ತಾರೆ. ವಿಜಯ್ ಅಭಿಮಾನಿಗಳಿಗಂತೂ ಹಬ್ಬ ಅವರು ಮಾಡಿರುವ ಅಕ್ಷನ್ಗಿಂತ ಪಂಚಿಂಗ್ ಡೈಲಾಗ್ಗಳೆ ಹೆಚ್ಚಾಗಿ ಚಪ್ಪಾಳೆಗಿಟ್ಟಿಸುತ್ತವೆ. ಈ ತಿಂಗಳ ಅಂತ್ಯದಲ್ಲಿ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಹೇಳಿದರು. ನಿರ್ಮಾಪಕ ಕೆ.ಮಂಜು ಎಂದಿನಂತೆ ಖುಷಿಯಾಗಿದ್ದರು. ತಮ್ಮ ಚಿತ್ರ ಸೋಲಲಿ ಗೆಲ್ಲಲಿ ನಾನು ಚಿತ್ರ ಮಾಡುವುದನ್ನು ಮಾತ್ರ ನಿಲ್ಲಿಸುವುದಿಲ್ಲ ಎಂದು ಪಣತೊಟ್ಟಂತಿರುವ ಅವರು ಇಂದು ಡಬ್ಬಲ್ ಹ್ಯಾಪಿಯಾಗಿದ್ದರು. ಎಕೆಂದರೆ ಈಗಾಗಲೆ ಚಿತ್ರದ ವಿತರನೆಯ ಹಕ್ಕುಗಳು ಅಂದುಕೊಂಡದಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟವಾಗಿ ಲಾಭ ತಂದುಕೊಟ್ಟಿದೆ. ಎಮ್.ಎಸ್. ರಮೇಶ್, ವಿಜಯ್ ಇಬ್ಬರ ಕಾಂಬಿನೇಷನ್ನಲ್ಲಿ ಈಗಾಗಲೆ ಒಂದು ಹಿಟ್ ಕೊಟ್ಟಾಗಿದೆ. ಇದರಲ್ಲಿ ಇನ್ನೂ ಪಳಗಿ ವರ್ಕ್ ಮಾಡಿರುವುದರಿಂದ ಚಿತ್ರ ಅತ್ಯುತ್ತಮವಾಗಿ ಮೂಡಿ ಬಂದಿದೆ. ವಿಜಯ್ ಅಭಿಮಾನಿಗಳಿಗೆ ಹೊಸ ಗೆಟಪ್ನಲ್ಲಿ ತಮ್ಮ ನೆಚ್ಚಿನ ನಾಯಕನನ್ನು ನೋಡುವ ಅವಕಾಶವು ದೊರಕಲಿದೆ. ಹಾಡುಗಳೂ ಒಂದಕ್ಕಿಂತ ಒಂದು ಅದ್ಭುತವಾಗಿವೆ ಎಂದು ತಮ್ಮ ಚಿತ್ರದ ಬಗ್ಗೆ ಸಂಪೂರ್ಣ ವಿಶ್ವಾಸದಿಂದ ಹೇಳಿದರು. ಸಂಗೀತ ನಿರ್ದೇಶಕ ಗುರುಕಿರಣ ಮಾತನಾಡಿ ಎಮ್.ಎಸ್.ರಮೇಶ್ ಜೊತೆ ಇದು ನನ್ನ ಒಂಭತ್ತನೆ ಚಿತ್ರ, ಇದೊಂದು ದಾಖಲೆಯಾಗಲಿದೆ. ಚಿತ್ರದಲ್ಲಿ ಐದು ಹಾಡುಗಳಿದ್ದು ಅದರಲ್ಲಿ ಒಂದು ಹಾಡು ಬ್ರಾಂಡ್ ಆಗುತ್ತದೆ. ಸಹಜವಾಗಿಯೇ ಹಾಡುಗಳ ಬಗ್ಗೆ ನಿರೀಕ್ಷೆ ಇರುತ್ತದೆ. ಐದು ವೆರೈಟಿ ಹಾಡುಗಳಿದ್ದು ಹೊಸ ರೀತಿಯಲ್ಲಿ ಮ್ಯೂಜಿಕ್ ಕಾಂಪೊಜ್ ಮಾಡಿದ್ದೇನೆ. ಅದೇ ತರಹ ಹಾಡುಗಳನ್ನೂ ಶೂಟ್ ಮಾಡಿದ್ದಾರೆ. ವಿಜಯ್ ಚಿತ್ರದ ಹಾಡು ಎಂದ ಮೇಲೆ ಜನರಲ್ಲಿ ಖಂಡಿತ ನಿರೀಕ್ಷೆ ಇರುತ್ತದೆ ಎಂದರು. ನಾಯಕ ವಿಜಯ್ ಮಾತನಾಡಿ ಚಿತ್ರದ ಪಬ್ಲಿಸಿಟಿಗೆ ನಿರ್ಮಾಪಕರು ಹೆಚ್ಚಿನ ಗಮನ ಹರಿಸಬೇಕಿದೆ. ಮೊದಲೇ ಪ್ಲಾನ್ ಮಾಡಿಕೊಂಡು ಉತ್ತಮ ಚಿತ್ರ ಮಂದಿರಗಳಲ್ಲಿ ಬಿಡುಗಡೆ ಮಾಡುವ ಕೆಲಸವನ್ನು ನಿರ್ಮಾಪಕರು ಮಾಡಬೇಕು. ಕೆಲವೊಮ್ಮೆ ಅವಸರದಿಂದ ರಿಲೀಜ್ ಮಾಡಿ ಚಿತ್ರದ ಸೋಲಿಗೆ ಅವರೇ ಕಾರಣರಾಗುತ್ತಾರೆ ಎಂದು ನಿರ್ಮಾಪಕರಿಗೆ ಬುದ್ಧಿ ಮಾತು ಹೇಳಿದರು. ನಾಯಕಿಯರಾದ ಕ್ಯಾಥೆರಿನಾ ಹಾಗೂ ರಾಗಿಣಿ ಹಾಜರಿದ್ದರು.